650 ಆಶ್ರಯ ಮನೆಗಳನ್ನು ವಸತಿ ಸಚಿವ ಜಮೀರ್ ಅಹಮದ್ ಶಿವಮೊಗ್ಗದ ಗೋವಿಂದಪುರದಲ್ಲಿ ಫೆ.25 ರ ನಾಳೆ ಬೆಳಿಗ್ಗೆ ಲಾಟರಿ ಮೂಲಕ ಹಂಚಲಿದ್ದು, ಕೆಲ ಪತ್ರಾವಳಿಗಳು ಇದನ್ನೇ ನೆಪವಾಗಿಟ್ಟುಕೊಂಡು 50 ಸಾವಿರ ರೂ.,ಗಳನ್ನು ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿದ ಬಡವರು ಬೀದಿಯಲ್ಲೇ ನಿಲ್ಲಿಸಿ ಕಪಾಳಕ್ಕೆ ಬಾರಿಸಿ ಕೊಟ್ಟ ಹಣ ವಾಪಸ್ ಪಡೆಯಬೇಕು.
– ಇದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸಚಿವ ಮಧು ಬಂಗಾರಪ್ಪ, ಶಾಸಕರಾದ ಚನ್ನಬಸಪ್ಪ, ಎಂ ಎಲ್ ಸಿ ಬಲ್ಕೀಶ್ ಬಾನುರವರ ಗಮನಕ್ಕೂ ತರಲಾಗಿದೆ. ಮೊದಲೇ ಫಲಾನುಭವಿಗಳು ತೀರಾ ಬಡವರಾಗಿದ್ದು ಮನೆ ಸಿಗುವ ಆಸೆಯಲ್ಲಿ ಕೇಳಿದವರಿಗೆ ತಾಳಿ ಅಡವಿಟ್ಟು ಹಣ ನೀಡುತ್ತಿದ್ದಾರೆ. ಯಾವುದೇ ಹಣ ನೀಡುವ ಅಗತ್ಯವಿಲ್ಲ. ಯಾವುದೇ ಆಮಿಷಗಳಿಗೆ ಜನ ಬಲಿ ಬೀಳಬಾರದೆಂದು ವಿನಂತಿಸಿದರು.
ಇಂಥದ್ದೇ ಮನೆ ಕೊಡಿಸುತ್ತೇವೆ, ಕೆಳಗಿನ ಮನೆ ಕೊಡಿಸುತ್ತೇವೆ, ಇಂಥದ್ದೇ ದಿಕ್ಕಿನ ಮನೆ ಕೊಡಿಸುತ್ತೇವೆ. ಸಚಿವ ಜಮೀರ್ ರವರು ಬಂದು ನಾಲ್ಕಾರು ಜನಕ್ಕೆ ಚೀಟಿ ಎತ್ತಿ ಸಂಪ್ರದಾಯಕ್ಕೆಂಬಂತೆ ಮನೆ ಪತ್ರ ಕೊಟ್ಟು ಹೋಗುತ್ತಾರೆ. ಆಮೇಲೆಲ್ಲ ನಿರ್ಧಾರ ಮಾಡೋದು ತಾವೇ ಎಂದು ಮಧ್ಯವರ್ತಿಗಳು ಹಣ ವಸೂಲು ಮಾಡುತ್ತಿದ್ದಾರೆ ಎಂದು ವಿವರ ನೀಡಿದರು.
ಬಿಳಿ ಅಂಗಿ ಹಾಕಿಕೊಂಡು ಭಿಕ್ಷೆ ಎತ್ತೋದನ್ನು ಕೆಲವರು ಬಿಡಬೇಕು. 650 ಜನ ಫಲಾನುಭವಿಗಳ ಪಟ್ಟಿ ಈ ಎತ್ತುವಳಿದಾರರಿಗೆ ಸಿಕ್ಕಿಬಿಟ್ಟಿದೆ. ಇವರಲ್ಲಿ ಕನಿಷ್ಠ 500 ಜನ ಫಲಾನುಭವಿಗಳಿಂದಲಾದರೂ 50 ಸಾವಿರ ರೂ., ಎತ್ತಲು ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕ ಕೋಟ್ಯಾಂತರ ಹಣದ ಗೋಲ್ ಮಾಲ್ ಮಾಡಲು ಹೊರಟಿದ್ದಾರೆ ಎಂದು ಎಳೆಎಳೆಯಾಗಿ ತಿಳಿಸಿದರು.